Thursday, September 17, 2015

ಹೈ.ಕ.ವಿ.ದಿನಾಚರಣೆ

ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನ.
""""""""""""""""""""""""""""""""""""""
ಸೆಪ್ಟೆಂಬರ್ 17 ಹೈದ್ರಾಬಾದ್ ಕರ್ನಾಟಕ ಜನತೆಯ ಪಾಲಿಗೆ ಮರೆಯಲಾಗದ ಮಹಾನ್ ದಿನ. ನಿಜಾಮನ ಕಪಿಮುಷ್ಠಿಯಿಂದ ವಿಮೋಚನೆಗೊಂಡ ಪುಣ್ಯ ದಿನ. ದೇಶಕ್ಕೆ 1947 ಆಗಷ್ಟ್ 15 ರಂದು ಸ್ವಾತಂತ್ರ ಸಿಕ್ಕರೆ, ಹೈದ್ರಾಬಾದ್ ಕರ್ನಾಟಕ ಭಾಗ ನಿಜಾಮನ ಕಪಿಮುಷ್ಠಿಯಿಂದ ಬಿಡುಗಡೆಗೊಂಡದ್ದು ಬರೋಬ್ಬರಿ ಒಂದು ವರ್ಷ ಮೂವತ್ತೆರಡು ದಿನಗಳ ನಂತರ. ಅಂದರೆ, 1948 ಸೆಪ್ಟೆಂಬರ್ 17 ರಂದು.
ದೇಶಕ್ಕೇ ಸ್ವಾತಂತ್ರ್ಯ ಸಿಕ್ಕಿದ್ದರೂ ಹೈದ್ರಾಬಾದ್-ಕರ್ನಾಟಕ ನಿಜಾಮರ ಹಿಡಿತದಲ್ಲಿತ್ತು:ಹೈದ್ರಾಬಾದ ಕರ್ನಾಟಕ ಹಿಂದುಳಿದ ಪ್ರದೇಶ ಅಂತಾನೇ ಗುರುತಿಸಿಕೊಂಡಿದೆ. ಅಭಿವೃದ್ಧಿಯಲ್ಲಿ ಮಾತ್ರವಲ್ಲ. ಈ ಪ್ರದೇಶ ಸ್ವಾತಂತ್ರ ಪಡೆಯುವಲ್ಲಿಯೂ ಹಿಂದೆಯೇ ಉಳಿದಿತ್ತು. 1947 ಆಗಸ್ಟ್ 15 ರಂದು ಭಾರತ ಬ್ರಿಟೀಷರ ಗುಲಾಮಗಿರಿಯಿಂದ ಸ್ವಾತಂತ್ರ್ಯ ಪಡೆಯಿತು. ಆದರೆ, ಹೈದ್ರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದ ಈಗಿನ ಹೈದ್ರಾಬಾದ್ ಕರ್ನಾಟಕ ಪ್ರದೇಶ ಮತ್ತು ಆಂಧ್ರ, ಮಹಾರಾಷ್ಟ್ರದ ಕೆಲ ಪ್ರದೇಶಗಳು 1947 ರ ನಂತರವೂ ಸ್ವಾತಂತ್ರ್ಯಗೊಂಡಿರಲಿಲ್ಲ. ಹೈದ್ರಾಬಾದ್ ರಾಜ್ಯದ ನಿಜಾಮ ಮೀರ್ ಉಸ್ಮಾನ್ ಅಲಿ ಭಾರತದ ಒಕ್ಕೂಟದಲ್ಲಿ ವಿಲೀನವಾಗಲು ಸುತಾರಾಂ ಒಪ್ಪಲಿಲ್ಲ.

➡200 ಸ್ವಾತಂತ್ರ್ಯ ಹೋರಾಟಗಾರರ ಬಲಿ:
ಭಾರತದ ಒಕ್ಕೂಟ ವ್ಯವಸ್ಥೆ ಒಪ್ಪದ ನಿಜಾಮರ ವಿರುದ್ಧ ಜನ ದಂಗೆ ಏಳಲಾರಂಭಿಸಿದರು. ಆದರೆ, ದಂಗೆ ಎದ್ದ ಜನರನ್ನ ಹತ್ತಿಕ್ಕಲು ನಿಜಾಮನ ಮತಾಂಧ ಸೇನಾನಿ ಖಾಸಿಂ ರಜ್ವಿ ತನ್ನ ರಜಾಕಾರ್ ಸಂಘಟನೆಯ ಮೂಲಕ ಅನಾಚರದ ಹಾದಿ ಹಿಡಿದಿದ್ದ. ರಜಾಕಾರರಿಂದ ಕೊಲೆ, ಲೂಟಿ, ಅತ್ಯಾಚಾರುಗಳು ತೀವ್ರವಾದವು. ರಜಾಕಾರರ ವಿರುದ್ಧ ಹಳ್ಳಿ ಹಳ್ಳಿಗಳಲ್ಲಿ ಹೋರಾಟಗಳು ನಡೆದವು. ಸಾಕಷ್ಟು ಜನ ಈ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದರು. ಸ್ವಾತಂತ್ರ್ಯ ಬಂದಾಗಲೂ ತ್ರಿವರ್ಣ ಧ್ವಜ ಹಿಡಿದು ಓಡಾಡೋದು ಕಷ್ಟವಾಗಿತ್ತು. ಯಾಕಂದ್ರೆ ರಜಾಕಾರರ ಕ್ರೌರ್ಯ ಎಲ್ಲೆ ಮೀರಿತ್ತು. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋಟರ್ ಗ್ರಾಮದ ಲಕ್ಷ್ಮಿ ದೇವಾಲಯದ ಮುಂದೆ 200ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರನ್ನು ನಿಜಾಮರ ಕಟ್ಟಾಳುಗಳಾದ ರಜಾಕಾರರು ನಿರ್ದಯವಾಗಿ ಕೊಂದಿದ್ದರು.

✏ಸರ್ದಾರ್ ವಲ್ಲಭಾಯ್ ಪಟೇಲರಿಂದ ಸಿಕ್ಕಿತು ಸ್ವಾತಂತ್ರ್ಯ:
ಜನರ ಮೇಲೆ ಹಿಂಸಾಚಾರ ನಡೆಸುತ್ತಿದ್ದ ನಿಜಾಮರ ಆಡಳಿತಕ್ಕೆ ಪೂರ್ಣ ವಿರಾಮ ಹಾಕಲು ನಿರ್ಧರಿಸಿದ ಉಕ್ಕಿನ ಮನುಷ್ಯ ಅಂದಿನ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ‘ಆಪರೇಷನ್ ಪೋಲೋ’ ಮಿಲಿಟರಿ ಕಾರ್ಯಾಚರಣೆ ನಡೆಸಿದರು. ಇದರ ಫಲವಾಗಿ 1948, ಸೆಪ್ಟೆಂಬರ್ 17 ರಂದು ನಿಜಾಮರ ಆಳ್ವಿಕೆ ಕೊನೆಗೊಂಡಿತು. ಹೈದ್ರಾಬಾದ್ ಕರ್ನಾಟಕ ಭಾಗ ವಿಮೋಚನೆಗೊಂಡು ಅಖಂಡ ಭಾರತದಲ್ಲಿ ಸೇರ್ಪಡೆಯಾಯಿತು. ಮೊದ ಮೊದಲು ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನವನ್ನು ಕೆಲವು ಸಂಘಟನೆಗಳಷ್ಟೇ ಆಚರಿಸುತ್ತಿದ್ದವು. 2002ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ, ಕೃಷ್ಣ, ಈ ಮಹತ್ವದ ದಿನವನ್ನು ಸರಕಾರದ ವತಿಯಿಂದಲೇ ಆಚರಿಸಲು ನಿರ್ಧರಿಸಿದರು. ಅಂದಿನಿಂದ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನದಂದು ರಾಜ್ಯದ ಮುಖ್ಯಮಂತ್ರಿಗಳು ಧ್ವಜಾರೋಹಣ ಮಾಡುವ ಪರಂಪರೆ ಇದೆ.
ಇಷ್ಟೆಲ್ಲ ಹೋರಾಟ ನಡೆಸಿದ ಈ ಭಾಗ ಅಭಿವೃದ್ಧಿಯಾಗಿದ್ದು ಅಷ್ಟಕ್ಕಷ್ಟೆ. ಸದ್ಯ ಜಾರಿಯಾಗಿರುವ 371ನೇ ಕಲಂನಿಂದಾದರೂ ಈ ಭಾಗದಲ್ಲಿ ಅಭಿವೃದ್ಧಿಯಾಗಬೇಕಿದೆ.

2 comments:

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23 :   ತರಗತಿ ಕನ್ನಡ ಇಂಗ್ಲೀಷ್ ಹಿಂದಿ ಗಣಿತ ವಿಜ್ಞಾನ ಸಮಾಜ ವಿಜ್ಞಾನ...